The Significance And Importance Of Ashadha Masam – ಆಷಾಢ ಮಾಸದ ಮಹತ್ವಗಳೇನು?
ಆಷಾಢ ಮಾಸ ಇನ್ನೇನು ಕೆಲ ದಿನಗಳಲ್ಲಿ ನಮ್ಮ ಬದುಕಿಗೆ ಕಾಲಿಡಲಿದೆ. ಈ ಮಾಸ ಆರಂಭವಾದರೆ ಸಾಕು ಯಾರೂ ಒಳ್ಳೆಯ ಕೆಲಸಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ.
ಈ ಅವಧಿಯಲ್ಲಿ ಯಾವುದೇ ಕಾರ್ಯಗಳು ನಡೆಯುವುದಿಲ್ಲ. ಹಿಂದೂ ಜ್ಯೋತಿಷ್ಯದ ಪ್ರಕಾರ ಇದು ಅಶುಭ ಮಾಸ. ಹೀಗಾಗಿ, ಆಷಾಢ ಮಾಸ ಪ್ರಾರಂಭವಾದ ಬಳಿಕ ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನಿಷೇಧವಾಗುತ್ತದೆ. ಇದಕ್ಕೆ ನೂರಾರು ಕಾರಣಗಳು ಇವೆ. ಆಷಾಢ ಮಾಸದಲ್ಲಿ ಮಳೆಯ ಆರ್ಭಟ ಹೆಚ್ಚಿರುತ್ತಿತ್ತು. ಈ ರೀತಿ ನಿರಂತರವಾದ ಮಳೆ, ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು.
ದಂಪತಿ ಬೇರೆ ಬೇರೆಯಾಗಿರುತ್ತಾರೆ
ಇದು ಆಷಾಢ ಮಾಸದ ನಿಜವಾದ ಮಹತ್ವಗಳನ್ನು ಹೇಳುತ್ತದೆ. ಆದರೆ, ಇದರ ಹಿಂದಿನ ಸಿದ್ಧಾಂತ ಬೇರೆ ಇದೆ. ಈ ಅವಧಿಯಲ್ಲಿ ಹೆಣ್ಣು ಗರ್ಭ ತಾಳಿದರೆ ಆಕೆ ಚೈತ್ರ ಮಾಸದಲ್ಲಿ ಅಂದರೆ ಬೇಸಿಗೆ ಗಾಲದಲ್ಲಿ ಮಗುವಿಗೆ ಜನ್ಮ ನೀಡುತ್ತಾರೆ. ಬೇಸಿಗೆ ಅವಧಿಯಲ್ಲಿ ಆಕೆಗೆ ಹೆಚ್ಚು ತೊಂದರೆಯಾಗಬಹುದು. ಇದರಿಂದ ಜನರು ಇದನ್ನು ಸಹ ನಂಬಲು ಆರಂಭಿಸಿದರು.
Read this – A Day of Divinity: Morning-to-Evening Hindu Mantras
ಅತ್ತೆ ಸೊಸೆ ಬೇರೆ ಬೇರೆ ಇರುತ್ತಾರೆ
ಮದುವೆಯಾದ ಹೊಸ ವರ್ಷದಲ್ಲಿ ಅತ್ತೆ-ಸೊಸೆ ಆಷಾಢ ಮಾಸದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆ ಪದ್ಧತಿ ಇದೆ. ಇದಕ್ಕೆ ಸರಿಯಾದ ಕಾರಣ ಇಲ್ಲವಾದರೂ, ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು.
ಮೆಹಂದಿ
ಹುಡುಗಿಯರು ತಮ್ಮ ಅಂಗೈ ಹಾಗೂ ಪಾದಗಳಿಗೆ ಮೆಹಂದಿ ಹಾಕಿಕೊಳ್ಳುತ್ತಾರೆ. ಸುಂದರ ಡಿಸೈನರ್ ಮೆಹಂದಿಗಳು ಮಹಿಳೆಯರನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಕಾಲದಲ್ಲಿ ಬದಲಾವಣೆಯಿಂದ ಚರ್ಮದ ಮೇಲೆ ಪರಿಣಾಮಗಳುಂಟಾಗಿ ಚರ್ಮ ಕಾಯಿಲೆಗೆ ಕಾರಣಗಳಾಗಬಹುದು. ಈ ಹಿನ್ನೆಲೆ ಪಾದ, ಅಂಗೈಗಳಿಗೆ ಮೆಹಂದಿ ಹಾಕಿಕೊಂಡರೆ ಆ ತೊಂದರೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು.
ಪೂಜೆಗಳು ಹಾಗೂ ವ್ರತಗಳು
ಇದು ಆಷಾಢ ಮಾಸದ ಮತ್ತೊಂದು ಮಹತ್ವ. ಈ ಅವಧಿಯಲ್ಲಿ ರಥ ಯಾತ್ರೆ, ಚಾರ್ತುಮಾಸ ಯಾತ್ರೆ, ಪಾಲ್ಕಿ ಯಾತ್ರೆ ಮುಂತಾದ ಪೂಜೆ ಹಾಗೂ ವ್ರತಗಳು ಆಷಾಢ ಮಾಸದಲ್ಲಿ ಜನಪ್ರಿಯವಾಗಿದೆ. ಭಕ್ತರು ಈ ಪೂಜೆ, ವ್ರತವನ್ನು ಭಕ್ತಿ, ಸಮರ್ಪಣೆಯೊಂದಿಗೆ ಆಚರಿಸುತ್ತಾರೆ.
Read this – Being Hindu: daily shlokas every Hindu should recite
ಮಳೆಗಾಲದ ಆರಂಭ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳು ನಡೆಯದಿದ್ದರೂ ಈ ಪೂಜೆ, ವ್ರತಗಳನ್ನು ಮಾಡಬಹುದು. ಈ ತಿಂಗಳ ಆಚರಣೆಗಳ ಮೇಲೆ ನೀವು ಗಮನಹರಿಸಿದರೆ, ಎಲ್ಲಾ ಆಚರಣೆಗಳು ಒಂದು ವಿಷಯದ ಕಡೆಗೆ ಸೂಚಿಸುತ್ತಿವೆ ಮತ್ತು ಅದು ಮಳೆಗಾಲದ ಆರಂಭವಾಗಿದೆ ಎಂಬ ಅಂಶವನ್ನು ನೀವು ತಿಳಿದುಕೊಳ್ಳುತ್ತೀರಿ.
ಆಷಾಢ ಮಾಸದ ಮಹತ್ವ
* ಈ ಮಾಸದಲ್ಲೇ ಶಿವ ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು
* ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಈ ಮಾಸದಲ್ಲಿ.
* ಅನುಸೂಯದೇವಿ ಎಂಬ ಮಹಾ ಪತಿವ್ರತೆ ಈ ಮಾಸದ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದಳು.
* ಅಮರನಾಥನ ಹಿಮಲಿಂಗ ದರ್ಶನ ಪ್ರತಿ ವರ್ಷ ಈ ಸಮಯದಲ್ಲೇ ಆರಂಭವಾಗುತ್ತದೆ
* ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಆಷಾಢದಲ್ಲಿ.
* ಆಷಾಢದ ಶುಕ್ರವಾರಗಳಲ್ಲಿ ಲಕ್ಷ್ಮೀ ಪೂಜೆಯನ್ನು ವಿಶೇಷವಾಗಿ ಆಚರಿಸುವರು. ಆ ದಿನ ಸಂಜೆ ಮನೆ ಮುಂದೆ ದೀಪ ಹಚ್ಚಿ ಇಡುತ್ತಾರೆ. ಮೈಸೂರು ಪ್ರಾಂತ್ಯಗಳಲ್ಲಿ ಈ ಆಚರಣೆ ನಡೆಯುತ್ತದೆ.
ಈ ಮಾಸದಲ್ಲೇ ಇದೆಲ್ಲಾ ಆರಂಭವಾಗಿದ್ದು..
* ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ್ದು
* ಇಂದ್ರನು ಗೌತಮರಿಂದ ಶಾಪ ಪಡೆದ. ಹಾಗೂ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತವನ್ನು ಮಾಡಿ ಶಾಪ ವಿಮೋಚನೆ ಪಡೆದ.
* ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
* ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ.
Read this – Vijay stands in the way of the Mekedatu project ; ಮೇಕೆದಾಟು ಯೋಜನೆಗೆ ವಿಜಯ್ ಅಡ್ಡಗಾಲು
ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವೂ ಸಹ ವಿಶೇಷವೇ ಆಗಿದೆ. ಇನ್ನೊಂದು ವಿಶೇಷ ಎಂದರೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನ ಬರುವುದು ಈ ಮಾಸದಲ್ಲೇ.
Follow Us
Follow KannadaFolks channel on WhatsApp
Visit the Kannadafolks.in follow the latest updates
Subscribe and Receive exclusive content and updates on your favourite topics
Subscribe to KannadaFloks YouTube Channel and watch Videos
Support Us 


