PM Modi in Udupi – ಉಡುಪಿಯಲ್ಲಿ ಮೋದಿ ರೋಡ್ ಶೋ
Read this-DK letter to Nirmala Sitharaman ನಿರ್ಮಲಾ ಸೀತಾರಾಮನ್ಗೆ ಡಿಕೆಶಿ ಪತ್ರ
ದೇಶದ ಪ್ರಧಾನಮಂತ್ರಿಗಳಾದ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಆಗಮಿಸಿರುವ ನರೇಂದ್ರ ಮೋದಿಯವರನ್ನು ಕರಾವಳಿಯ ಮಂದಿ ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ.ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಮೋದಿಯವರು, ಅಲ್ಲಿಂದ ಸೇನಾ ಹೆಲಿಕಾಪ್ಟರ್’ನಲ್ಲಿ ಉಡುಪಿಯ ಹೆಲಿಪ್ಯಾಡ್’ಗೆ ಬಂದಿಳಿದರು.
ಅಲ್ಲಿಂದ ರೋಡ್ ಶೋ ಆರಂಭವಾಗಿದ್ದು, ದಾರಿಯುದ್ದಕ್ಕೂ ಲಕ್ಷಾಂತರ ಮಂದಿ ಹೂಮಳೆ ಸುರಿಸಿ, ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿದ್ದಾರೆ.ಉಡುಪಿಯಿಂದ ಕೃಷ್ಣ ಮಠದವರೆಗೂ ನಡೆಯುತ್ತಿರುವ ರೋಡ್ ಶೋದಲ್ಲಿ ಪ್ರಧಾನಿ ಮೋದಿಯವರು ಅಭಿಮಾನಿಗಳತ್ತ ಕೈ ಬೀಸಿ ಸಾಗಿದ್ದಾರೆ.ರೋಡ್ ಶೋ ಆರಂಭವಾದಾಗಿನಿಂದಲೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ನಿಂತು ಜೈಘೋಷ ಹಾಕಿ, ಹೂಮಳೆ ಸುರಿಸಿ, ನೆಚ್ಚಿನ ನಾಯಕನನ್ನು ಹತ್ತರದಿಂದ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.
ನಿಗದಿತ ಸಮಯಕ್ಕಿಂತ 40 ನಿಮಿಷ ಮುಂಚೆಯೇ ಮೋದಿ ಆಗಮನ
ಬೆಳಗ್ಗೆ 10.25ಕ್ಕೆ ಭಾರತೀಯ ವಾಯುಪಡೆ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಾಜ್ಯ ಸರ್ಕಾರದ ಪರವಾಗಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ , ಭಾಗೀರಥಿ ಮುರುಳ್ಯ, ಗ್ರೇಟರ್ ಬೆಂಗಳೂರು ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
Read this-Laksa Kantha Gita Parayana in Udupi ಗೀತಾ ಪಾರಾಯಣದಲ್ಲಿ ಮಧ್ವರಾಜ್
ಈ ನಡುವೆ ಉಡುಪಿ ಭೇಟಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ ಎಂದು ಹೇಳಿದ್ದಾರೆ.
ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದ್ದಾರೆ.
ರೋಡ್ ಶೋ ಬಳಿಕ ಮೋದಿಯವರು ರಥಬೀದಿಗೆ ಬಂದು ಸುವರ್ಣ ಕನಕನ ಕಿಂಡಿ ಉದ್ಘಾಟಿಸಿ, ಮಧ್ವಸರೋವರದಲ್ಲಿ ತೀರ್ಥ ಪ್ರೋಕ್ಷಣೆಗೈದು ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ. ಶ್ರೀಕೃಷ್ಣನ ಎದುರು ಪುತ್ತಿಗೆ ಶ್ರೀಗಳಿಂದ ಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸುತ್ತಾರೆ. ಚಂದ್ರಶಾಲೆಯಲ್ಲಿ ಪೇಜಾವರ ಶ್ರೀಗಳು ಮತ್ತು ಅಷ್ಟ ಮಠಾಧೀಶರನ್ನು ಭೇಟಿ ಮಾಡಲಿದ್ದಾರೆ. ಪರ್ಯಾಯ ಶ್ರೀಗಳ ಸಂನ್ಯಾಸ ದೀಕ್ಷೆಯ 50ನೇ ವರ್ಷಾಚರಣೆ ಅಂಗ ಪುತ್ತಿಗೆ ಮಠದಲ್ಲಿ ರೂ.2 ಕೋಟಿ ವೆಚ್ಚದಲ್ಲಿ ನಿರ್ಮಿ ಸಲಾಗಿರುವ ಸುವರ್ಣ ತೀರ್ಥ ಮಂಟಪ ಉದ್ಘಾಟಿಸಲಿದ್ದಾರೆ.
Read this-Karnataka Weather ಮಲೆನಾಡಿನಲ್ಲಿ ದಟ್ಟ ಮಂಜು
ಅಲ್ಲಿಂದ ‘ಲಕ್ಷಕಂಠ ಗೀತಾ ಪಾರಾಯಣ’ ಸಭಾಂಗಣಕ್ಕೆ ಆಗಮಿಸಲಿದ್ದಾರೆ. ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾ ದರುಕೋಟಿಗೂ ಅಧಿಕ ಭಕ್ತರಿಂದ ಭಗವದ್ಗೀತೆ ಲೇಖನ ಅಭಿಯಾನವನ್ನು ನಡೆಸಿದ್ದು, ಅದರ ಕೃಷ್ಣಾರ್ಪಣೆಯಂಗವಾಗಿ ಶುಕ್ರವಾರ ಒಂದು ಲಕ್ಷಕ್ಕೂ ಅಧಿಕ ಮಂದಿ ಭಗವದ್ಗೀತೆಯನ್ನು ಬೆಳಗ್ಗೆ 9 ಗಂಟೆಯಿಂದ ಏಕಕಾಲದಲ್ಲಿ ಪಠಿಸಲಿದ್ದಾರೆ. ಈ ಕಾರ್ಯಕ್ರಮದ ಕೊನೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಅವರು ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ 10 ಶ್ಲೋಕ ಹಾಗೂ ಪುರುಷೋತ್ತಮ ಯೋಗದ ಶ್ಲೋಕಗಳನ್ನು ಪಠಿಸಲಿದ್ದಾರೆ.
ಪರ್ತಗಾಳಿ ಮಠಕ್ಕೆ ಭೇಟಿ
ಮಧ್ಯಾಹ್ನ 3.15ಕ್ಕೆ ಉಡುಪಿಯಿಂದ ಸೇನಾ ಹೆಲಿಕಾಪ್ಟರ್ ನಲ್ಲಿ ಪರ್ತಗಾಳಿ ಮಠದ ಗುರುಪರಂಪರೆಯ 550ನೇ ವರ್ಷಾಚರಣೆಯಲ್ಲಿ ಭಾಗವಹಿಸಲು ಗೋವಾಕ್ಕೆ ತೆರಳುತ್ತಾರೆ.
ಜೀವೊತ್ತಮ ಮಠಕ್ಕೆ ಭೇಟಿ ನೀಡಿ, ಕಂಚಿನಿಂದ ಮಾಡಲಾದ ಪ್ರಭು ಶ್ರೀರಾಮನ 77 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.
ನಂತರ, ಮಠ ಅಭಿವೃದ್ಧಿಪಡಿಸಿದ ‘ರಾಮಾಯಣ ಥೀಮ್ ಪಾರ್ಕ್ ಉದ್ಯಾನವನ’ವನ್ನು ಉದ್ಘಾಟಿಸಲಿದ್ದಾರೆ. ವಿಶೇಷ ಅಂಚೆ ಚೀಟಿ ಮತ್ತು ಕಾರ್ಯಕ್ರಮದ ಸ್ಮರಣಾರ್ಥ ನಾಣ್ಯವನ್ನು ಕೂಡ ಬಿಡುಗಡೆ ಮಾಡಲಿದ್ದಾರೆ.
Support Us 


