Open warfare on hold for now – ಬಹಿರಂಗ ಕದನಕ್ಕೆ ಸದ್ಯ ವಿರಾಮ
Read this-Congress Using Dalit Vote Bank ದಲಿತ ಮತ ಬ್ಯಾಂಕ್ ಬಳಕೆಯಲ್ಲಿ ಕಾಂಗ್ರೆಸ್:ಎನ್. ಮಹೇಶ್
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಆಂತರಿಕ ಭಿನ್ನಮತದ ಕುರಿತಾದ ಊಹಾಪೋಹಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಸಿಎಂ ನಿವಾಸ ‘ಕಾವೇರಿ’ಯಲ್ಲಿ ನಡೆದ ಮಹತ್ವದ ಉಪಾಹಾರ ಕೂಟದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಉಭಯ ನಾಯಕರು, “ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ, ಹೈಕಮಾಂಡ್ ತೀರ್ಮಾನವೇ ನಮಗೆ ಅಂತಿಮ,” ಎಂದು ಸ್ಪಷ್ಟಪಡಿಸುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ.
ಹೈಕಮಾಂಡ್ ಸೂಚನೆ ಮೇರೆಗೆ ‘ಬ್ರೇಕ್ಫಾಸ್ಟ್ ಡಿಪ್ಲೋಮಸಿ’
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ದೂರವಾಣಿ ಕರೆಯ ಮೇರೆಗೆ ಈ ಭೇಟಿ ನಡೆದಿದೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಿದರು. “ವೇಣುಗೋಪಾಲ್ ಅವರು ನಮಗಿಬ್ಬರಿಗೂ ಕರೆ ಮಾಡಿ ಮಾತನಾಡಲು ಸೂಚಿಸಿದ್ದರು. ಡಿಕೆಶಿಯವರು ತಮ್ಮ ಮನೆಗೆ ಆಹ್ವಾನಿಸಿದರಾದರೂ, ನಾನೇ ಅವರನ್ನು ಉಪಾಹಾರಕ್ಕೆ ಕರೆದೆ. ಸಚಿವ ಪೊನ್ನಣ್ಣ ಅವರ ಜೊತೆಗೂಡಿ ನಾವಿಬ್ಬರೂ ಉಪಾಹಾರ ಸೇವಿಸಿ ಚರ್ಚೆ ನಡೆಸಿದ್ದೇವೆ,” ಎಂದು ಸಿಎಂ ಭೇಟಿಯ ಹಿನ್ನೆಲೆಯನ್ನು ವಿವರಿಸಿದರು.
Read this-Karnataka: DK Shivakumar Calls for Overhaul of Tungabhadra Dam Gates
ಗೊಂದಲಗಳಿಗೆ ತೆರೆ ಎಳೆದ ನಾಯಕರು
ಕಳೆದ ಒಂದು ತಿಂಗಳಿಂದ ಅನಗತ್ಯ ಗೊಂದಲಗಳು ಸೃಷ್ಟಿಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದ ಸಿಎಂ, “ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿರುವಂತೆ ನಮ್ಮಲ್ಲಿ ಯಾವುದೇ ‘ಡಿಫರೆನ್ಸಸ್’ ಇಲ್ಲ. 2023ರ ಚುನಾವಣೆಯಲ್ಲಿ ಹೇಗೆ ಒಗ್ಗೂಡಿ ಕೆಲಸ ಮಾಡಿದೆವೋ, ಮುಂದೆಯೂ ಹಾಗೆಯೇ ಮುಂದುವರಿಯಲಿದ್ದೇವೆ,” ಎಂದರು. ದಿಲ್ಲಿಗೆ ತೆರಳುತ್ತಿರುವ ಶಾಸಕರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಸಚಿವ ಸಂಪುಟ ವಿಸ್ತರಣೆ ಲಾಬಿಗಾಗಿ ಇರಬಹುದೇ ಹೊರತು, ನಾಯಕತ್ವದ ವಿರುದ್ಧದ ನಡೆ ಅಲ್ಲ ಎಂದು ಸ್ಪಷ್ಟನೆ ನೀಡಿದರು.
ಗುರಿ: 2028ರ ಚುನಾವಣೆ ಮತ್ತು ಬೆಳಗಾವಿ ಅಧಿವೇಶನ
ಈ ಭೇಟಿಯ ಪ್ರಮುಖ ಉದ್ದೇಶ ಮುಂಬರುವ ಚುನಾವಣೆಗಳು ಮತ್ತು ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನ ಎಂದು ನಾಯಕರು ತಿಳಿಸಿದರು. ಸ್ಥಳೀಯ ಸಂಸ್ಥೆಗಳು ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಇನ್ನು ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮಂಡಿಸಲಿರುವ ಅವಿಶ್ವಾಸ ನಿರ್ಣಯವನ್ನು ಸಮರ್ಥವಾಗಿ ಎದುರಿಸಲು ತಂತ್ರ ಹೆಣೆಯಲಾಗಿದೆ. “ನಮ್ಮ ಬಳಿ 142 ಶಾಸಕರ ಬಲವಿದ್ದರೆ, ವಿಪಕ್ಷಗಳ ಒಟ್ಟು ಬಲ 82 ಮಾತ್ರ. ಅವರ ಅವಿಶ್ವಾಸ ನಿರ್ಣಯ ಮಂಡನೆ ಯತ್ನ ಒಂದು ವ್ಯರ್ಥ ಕಸರತ್ತು,” ಎಂದು ಸಿಎಂ ವ್ಯಂಗ್ಯವಾಡಿದರು.
Read this-This Is Unfair: DK Shivakumar On Supreme Courts Sorry In CBI Case
ನಮ್ಮದು ಒಂದೇ ಗುಂಪು – ಅದು ‘ಕಾಂಗ್ರೆಸ್’
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ರಾಜ್ಯದಲ್ಲಿ ಯಾವುದೇ ಬಣಗಳಿಲ್ಲ, ಇರುವುದು ಒಂದೇ ಗುಂಪು, ಅದು ಕಾಂಗ್ರೆಸ್ ಗುಂಪು,” ಎಂದು ಗುಡುಗಿದರು. ಹಿಂದೆ ಹೈಕಮಾಂಡ್ ಸೂಚನೆಯಂತೆ ತಾವು ನಡೆದುಕೊಂಡಿದ್ದೇವೆ. ಈಗಲೂ ಅವರ ಆದೇಶವನ್ನೇ ಪಾಲಿಸುತ್ತೇವೆ ಎಂದು ಡಿಕೆಶಿ ಪುನರುಚ್ಚರಿಸಿದರು.
ಮಧ್ಯದಲ್ಲಿ ತೂರಿಬಂದ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, “ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುವುದೇ ನಮ್ಮ ನಿಲುವು,” ಎಂದು ಹೇಳುವ ಮೂಲಕ ಚೆಂಡನ್ನು ವರಿಷ್ಠರ ಅಂಗಳಕ್ಕೆ ತಳ್ಳಿದರು.
ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮನೆಗೆ ಊಟಕ್ಕೆ ಆಗಮಿಸಲಿದ್ದಾರೆ ಎಂದು ಡಿಕೆ ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲೇ ಪ್ರಕಟಿಸಿದರು. ಇದರೊಂದಿಗೆ ಕಾಂಗ್ರೆಸ್ನಲ್ಲಿ ಕೆಲ ಸಮಯದಿಂದ ನಡೆಯುತ್ತಿದ್ದ ತೆರೆಮರೆಯ ಗುದ್ದಾಟಕ್ಕೆ ವಿರಾಮ ಬಿದ್ದಿದೆ. ಇದು ಅಲ್ಪ ವಿರಾಮವೋ, ಪೂರ್ಣ ವಿರಾಮವೋ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
Support Us 


