Ayyappa Swamy – ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದು ಹೇಗೆ..? – Top Devotional stories
ಶಬರಿಮಲೆ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಮಾಲೆ ಧರಿಸುವ ಭಕ್ತರು. ಅಯ್ಯಪ್ಪ ಸ್ವಾಮಿಯ ಸಾನಿಧ್ಯವಾದ ಶಬರಿಮಲೆಯನ್ನು ಜಾತ್ಯಾತೀತೆಯ ನೆಲೆಬೀಡೆಂದರೆ ತಪ್ಪಾಗಲಾರದು. ಯಾಕೆಂದರೆ ಮಾಲೆ ಧರಿಸಿದ ಯಾವುದೇ ಜಾತಿಯ ಭಕ್ತನಾದರೂ ಕೂಡ ಶಬರಿಮಲೆಯಲ್ಲಿ ಒಂದಾಗುತ್ತಾರೆ. ಇಲ್ಲಿ ಭಕ್ತರ ಭಕ್ತಯೇ ಪ್ರಧಾನವಾಗಿರುತ್ತದೆ. ಮಾಲೆ ಧರಿಸಿದ ಪ್ರತಿಯೊಂದು ಅಯ್ಯಪ್ಪನ ಭಕ್ತರು ಒಂದು ಕುಟುಂಬದಂತೆ ಮಕರ ಸಂಕ್ರಾಂತಿಯಂದು ಶಬರಿ ಮಲೆಯಲ್ಲಿ ಬಂದು ಸೇರುತ್ತಾರೆ.
ಶಬರಿಮಲೆಗೆ ವ್ರತ:
ಭಕ್ತರು ತಮ್ಮ ಕಷ್ಟಗಳನ್ನು ದೂರಾಗಿಸುವಂತೆ ಅಯ್ಯಪ್ಪ ಸ್ವಾಮಿಯ ಬಳಿ ಬೇಡಿಕೆಯನ್ನಿಟ್ಟು ಮಾಲೆಯನ್ನು ಧರಿಸುತ್ತಾರೆ. ಮಾಲೆ ಧರಿಸಿದಾಗ ಭಕ್ತರು ಕಠಿಣ ವ್ರತವನ್ನು ಪಾಲಿಸಬೇಕಾಗುತ್ತದೆ. ಮಾಲೆ ಧರಿಸಿದ ವ್ರತ ಧಾರಿಗಳು ಕೊರೆಯುವ ಚಳಿಯ್ಲಲ್ಲಿ ಮುಂಜಾನೆ ಬೇಗ ಎದ್ದು, ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಹಿಡಿದ ವ್ರತ ಮುಗಿಯದ ತನಕ ಕಾಲಿಗೆ ಚಪ್ಪಲಿಯನ್ನು ಧರಿಸುವುದಿಲ್ಲ. ಮಾಂಸಾಹಾರದೊಂದಿಗೆ ತಮ್ಮ ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸಿ, ದುಶ್ಚಟಗಳಿಂದ ದೂರಾಗಿ ಅಯ್ಯಪ್ಪನ ನಾಮ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಾರೆ.
ಗುರುಸ್ವಾಮಿ:
ಪ್ರತಿಯೊಬ್ಬ ಅಯ್ಯಪ ಸ್ವಾಮಿ ಮಾಲಾಧಾರಿಗೆ ಗುರುಸ್ವಾಮಿಯ ಮಾರ್ಗದರ್ಶನ ಅತ್ಯವಶ್ಯಕವಾಗಿರುತ್ತದೆ. ಗುರುಸ್ವಾಮಿಯವರ ಕೈಯಿಂದ ಇತರೆ ವ್ರತಧಾರಿಗಳು ಮಾಲಾಧಾರಣೆ ಮಾಡಿಕೊಂಡು, ಗುರುಸ್ವಾಮಿ ಬೋಧಿಸಿದ ನೀತಿ ನಿಯಮಗಳನ್ನು ಪಾಲಿಸಿಕೊಂಡು ವ್ರತಾಚರಣೆ ಮಾಡಬೇಕಾಗುತ್ತದೆ. ಗುರುಸ್ವಾಮಿಯಾಗಬೇಕಾದರೆ ಓರ್ವ ಅಯ್ಯಪ್ಪ ಮಾಲಾಧಾರಿಯು ಸತತವಾಗಿ 5 ವರ್ಷಗಳ ಕಾಲ ಮಾಲೆಯನ್ನು ಹಾಕಿ, ಪ್ರತೀ ಮಕರ ಸಂಕ್ರಾಂತಿಯಂದು ಅಯ್ಯಪ್ಪನ ದರ್ಶನ ಭಾಗ್ಯವನ್ನು ಪಡೆದುಕೊಳ್ಳಬೇಕಾಗುತ್ತದೆ.
5 ವರ್ಷ ಸಂಪೂರ್ಣಗೊಂಡ ನಂತರ ಅಯ್ಯಪ್ಪ ಸ್ವಾಮಿಯ ಸಾನಿಧ್ಯದಲ್ಲಿ ಶಬರಿಮಲೆಯ ತಂತ್ರಿಗಳ ಉಪಸ್ಥಿತಿಯಲ್ಲಿ ಗುರುಗಳಿಂದ ದೀಕ್ಷೆಯನ್ನು ಪಡೆದು ನಂತರ ಗುರುಸ್ವಾಮಿಯಾಗಬೇಕಾಗುತ್ತದೆ. ದೀಕ್ಷೆ ಪಡೆದ ನಂತರ ಅಲ್ಲಿಗೆ ತನ್ನ ಕರ್ತವ್ಯವನ್ನು ಕೈಬಿಡುವಂತಿಲ್ಲ. ಪ್ರತೀ ವರ್ಷ ಒಬ್ಬ ಕನ್ನಿ ಸ್ವಾಮಿಯೊಂದಿಗೆ ಶಬರಿಮಲೆಗೆ ಹೋಗಬೇಕಾಗುತ್ತದೆ. ತನ್ನ ಶಿಷ್ಯರ ಯಾತ್ರೆಯ ಎಲ್ಲಾ ಜವಬ್ದಾರಿಗಳು, ನೀತಿ – ನಿಯಮಗಳು ಗುರುಸ್ವಾಮಿಯ ಮೇಲಿರುತ್ತದೆ.
ಅಯ್ಯಪ್ಪ ಸ್ವಾಮಿ ದೇವಾಲಯ, ಶಬರಿಮಲೆ:
ಪ್ರತೀ ತಿಂಗಳು ಕೇವಲ 5 ದಿನಗಳ ಕಾಲ ಮಾತ್ರ ತೆರೆಯುವ ಈ ದೇವಾಲಯವು ಪ್ರತೀ ವರ್ಷ ನವೆಂಬರ್ನಿಂದ ಡಿಸೆಂಬರ್ವರೆಗೆ ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಗಾಗಿ ತೆರೆದಿರುತ್ತದೆ. ವ್ರತ ಕೈಗೊಂಡು ಮಾಲೆ ಧರಿಸಿದ ಭಕ್ತರು ಪ್ರತೀ ವರ್ಷ ಈ ಸಮಯದಲ್ಲಿ ಶಬರಿ ಮಲೆ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶಬರಿ ಮಲೆ ದೇವಾಲಯಕ್ಕೆ ಮಾಲೆಯನ್ನು ಧರಿಸಿ ಭೇಟಿ ನೀಡುವ ಮುನ್ನ ಅಯ್ಯಪ್ಪ ಭಕ್ತರು 41 ದಿನಗಳ ಕಾಲ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಠಿಣ ವ್ರತವನ್ನು ಪಾಲಿಸಬೇಕಾಗುತ್ತದೆ. ಅವುಗಳೆಂದರೆ..
1. ಉಪವಾಸ ವ್ರತ:
ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಾಲೆಯನ್ನು ಧರಿಸುವ ಅಯ್ಯಪ್ಪ ಭಕ್ತರು, 41 ದಿನಗಳ ಕಾಲ ಉಪವಾಸ ವ್ರತವನ್ನು ಕೈಗೊಳ್ಳಬೇಕು. ಪ್ರತೀ ವರ್ಷದ ನವೆಂಬರ್ ತಿಂಗಳ ಎರಡನೇ ವಾರದಿಂದ ಭಕ್ತರು ಉಪವಾಸ ವ್ರತವನ್ನು ಕೈಗೊಂಡು ಮಾಲೆಯನ್ನು ಧರಿಸುತ್ತಾರೆ. ಉಪವಾಸದ ಸಮಯದಲ್ಲಿ ಅಯ್ಯಪ್ಪ ಭಕ್ತರು ಯಾವುದೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಿಲ್ಲ. ಭಕ್ತರು ಮಾಲೆ ಧರಿಸಿದ ಸಮಯದಲ್ಲಿ ಕೇವಲ ದೇವರ ಭಜನೆಯಲ್ಲಿ, ಪೂಜೆಯಲ್ಲಿ, ದೇವರ ನಾಮ ಸ್ಮರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಬಡವರಿಗೆ, ನಿರ್ಗತಿಕರಿಗೆ, ರೋಗಿಗಳಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕು.
2. ಜೀವನ ಶೈಲಿ:
ಅಯ್ಯಪ್ಪ ವ್ರತಧಾರಿಗಳು ಯಾವುದೇ ಕಾರಣಕ್ಕೂ ಮಾಂಸಾಹಾರವನ್ನು ಸೇವಿಸುವಂತಿಲ್ಲ. ಹಾಗೂ ಕಾಲಿಗೆ ಚಪ್ಪಲಿಯನ್ನು ಹಾಕುವಂತಿಲ್ಲ. ಬದಲಾಗಿ, ಕಾಲಿ ಕಾಲಿನಲ್ಲಿ ನಡೆಯಬೇಕು. ಮೆತ್ತನೆಯ ಹಾಸಿಗೆ ಮೇಲೆ ಮಲಗುವಂತಿಲ್ಲ. ವ್ರತಧಾರಿಗಳು ನೆಲದ ಮೇಲೆ ಮಲಗಬೇಕು. ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ವ್ರತಧಾರಿಗಳು ಕೈಯಲ್ಲಿ ತುಳಸಸಿ ಎಲೆಗಳನ್ನು ಇಟ್ಟುಕೊಂಡಿರಬೇಕು. ತಲೆಗೆ ಮತ್ತು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬಾರದು.
3. ಬಟ್ಟೆ:
ಕಠಿಣ ನಿಯಮಗಳನ್ನು ಪಾಲಿಸಿದ ಬಳಿಕ ಇರುಮುಡಿ ಹೊತ್ತು ಶಬರಿಮಲೆಯತ್ತ ಸಾಗುತ್ತಾರೆ. ಇನ್ನು ಭಕ್ತರು ಕಡ್ಡಾಯವಾಗಿ ಕಪ್ಪು ಬಟ್ಟೆಯನ್ನು, ಕೇಸರಿ ಬಟ್ಟೆಯನ್ನು ಮಾತ್ರ ಧರಿಸಿ ಹಣೆಗೆ ಗಂಧವನ್ನು ಹಚ್ಚಿಕೊಂಡಿರಬೇಕು. ದೇವಸ್ಥಾನಕ್ಕೆ ಹೋಗುವಾಗ ಜೋಳಿಗೆಯನ್ನು ಹಿಡಿದುಕೊಂಡು ಹೋಗಬೇಕು. ಅಯ್ಯಪ್ಪ ವ್ರತಧಾರಿಗಳು ಧರಿಸುವ ಜೋಳಿಗೆಯಲ್ಲೂ ಕೆಲವೊಂದು ನಿಯಮಗಳಿವೆ. ದೇವಸ್ಥಾನಕ್ಕೆ ಮೊದಲಬಾರಿ ಹೋಗುವ ಭಕ್ತರು ಕೆಂಪು ಬಣ್ಣದ ಜೋಳಿಗೆ ಹೊಂದಿರಬೇಕು. ಮೂರನೇ ಬಾರಿ ದೇಗುಲಕ್ಕೆ ಭೇಟಿ ನೀಡುವರು ನೀಲಿ ಜೋಳಿಗೆ ಈಗಾಗಲೇ ಅನೇಕ ಬಾರಿ ಹೋದವರಿಗೆ ಕೇಸರಿ ಬಣ್ಣದ ಜೋಳಿಗೆ ನೀಡಲಾಗುವುದು.ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಈ ಮೇಲಿನ ವಿಧಿ – ವಿಧಾನಗಳನ್ನು, ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಯ್ಯಪ್ಪ ಸ್ವಾಮಿಯ ವ್ರತವನ್ನು ಪಾಲಿಸುವವರು ಕಟ್ಟು ನಿಟ್ಟಿನ ನಿಯಮಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ.
Support Us 


