‘ನಾನು ಕಲೈನಾರ್ ಮೊಮ್ಮಗ, ಕ್ಷಮೆ ಕೋರೊಲ್ಲ‘: ಸನಾತನ ಧರ್ಮ ಹೇಳಿಕೆಗೆ ಉದಯನಿಧಿ ಸ್ಟಾಲಿನ್ ಸಮರ್ಥನೆ
ಉದಯನಿಧಿ ಸ್ಟಾಲಿನ್ ಸನಾತನ ಸಾಲು:2023ರ ಸೆಪ್ಟೆಂಬರ್ ತಿಂಗಳಲ್ಲಿ ಸನಾತನ ಧರ್ಮದ ಕುರಿತಾದ ಹೇಳಿಕೆಯಿಂದ ದೇಶಾದ್ಯಂತ ವಿವಾದ ಸೃಷ್ಟಿಸಿದ್ದ ತಮಿಳುನಾಡಿನ ಈಗಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ದ್ರಾವಿಡ ನಾಯಕರು ಈ ಹಿಂದೆ ಹೇಳಿದ್ದನ್ನೇ ಪ್ರತಿಧ್ವನಿಸಿರುವುದಾಗಿ ತಿಳಿಸಿದ್ದಾರೆ.
- ಸನಾತನ ಧರ್ಮ ನಿರ್ಮೂಲನೆ ಕುರಿತಾದ ವಿವಾದದ ಬಗ್ಗೆ ಉದಯನಿಧಿ ಸ್ಟಾಲಿನ್ ವಿವರಣೆ
- ತಮ್ಮ ಹೇಳಿಕೆ ಮಹಿಳೆಯರು ಎದುರಿಸುತ್ತಿದ್ದ ಶೋಷಣೆ ಬಗ್ಗೆ ಮಾತನಾಡಿದ್ದು ಎಂದ ಡಿಸಿಎಂ
- ಪೆರಿಯಾರ್, ಅಣ್ಣಾದೊರೈ ಮತ್ತು ಎಂ ಕರುಣಾನಿಧಿ ಹೇಳಿಕೆಯನ್ನೇ ಪುನರುಚ್ಚರಿಸಿದ್ದಾಗಿ ಸ್ಪಷ್ಟನೆಚೆನ್ನೈ: ಸನಾತನ ಧರ್ಮವನ್ನು ಡೆಂಗೆದಂತಹ ಕಾಯಿಲೆಗಳಿಗೆ ಹೋಲಿಸಿದ್ದಲ್ಲದೆ, ಅದರ ನಿರ್ಮೂಲನೆಗೆ ಕರೆಕೊಟ್ಟಿದ್ದ ವಿವಾದಕ್ಕೆ ತಾವು ಯಾವ ಕಾರಣಕ್ಕೂ ಕ್ಷಮೆ ಕೋರುವುದಿಲ್ಲ ಎಂದು ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ದೃಢವಾಗಿ ಹೇಳಿದ್ದಾರೆ. ತಮ್ಮ ಹೇಳಿಕೆಯು ಮಹಿಳೆಯರ ಮೇಲಿನ ಶೋಷಣೆಯ ಆಚರಣೆಗಳನ್ನು ನಿವಾರಣೆ ಮಾಡುವ ಉದ್ದೇಶದ್ದಾಗಿದೆ ಎಂದು ಅವರು ವಿವರಣೆ ಕೊಟ್ಟಿದ್ದಾರೆ.ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಈ ಮೂಲಕ ಅದರ ಕುರಿತು ವಿವಾದ ಸೃಷ್ಟಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉದಯನಿಧಿ ಅವರು ಪೆರಿಯಾರ್, ಮಾಜಿ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಮತ್ತು ಎಂ ಕರುಣಾನಿಧಿ ಅವರಂತಹ ದ್ರಾವಿಡ ನಾಯಕರ ದೃಷ್ಟಿಕೋನವನ್ನು ತಾವು ಪ್ರತಿಧ್ವನಿಸಿದ್ದಾಗಿ ಹೇಳಿದ್ದಾರೆ.
“ಮಹಿಳೆಯರಿಗೆ ಅಧ್ಯಯನ ಮಾಡಲು ಅವಕಾಶ ನೀಡುತ್ತಿರಲಿಲ್ಲ. ಅವರು ಮನೆಯಿಂದ ಹೊರಗೆ ಹೋಗುವುದು ಸಾಧ್ಯವಿರಲಿಲ್ಲ. ಅವರ ಗಂಡ ಸತ್ತರೆ, ಅವರೂ ಕೂಡ ಸಾಯಬೇಕಾದ ಸನ್ನಿವೇಶ ಇತ್ತು. ತಂಥೈ ಪೆರಿಯಾರ್ ಅವರು ಇವೆಲ್ಲದರ ವಿರುದ್ಧ ಮಾತನಾಡಿದ್ದರು. ಪೆರಿಯಾರ್, ಅಣ್ಣ ಮತ್ತು ಕಲೈನಾರ್ ಏನು ಹೇಳಿದ್ದರೋ ಅದನ್ನು ನಾನು ಪ್ರತಿಧ್ವನಿಸಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ.
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಮಗ ಉದಯನಿಧಿ ಅವರು 2023ರ ಸೆಪ್ಟೆಂಬರ್ನಲ್ಲಿ ಸನಾತನ ಧರ್ಮವನ್ನು ‘ಡೆಂಗ್ಯೂ’ ಮತ್ತು ‘ಮಲೇರಿಯಾ’ ರೋಗಗಳಿಗೆ ಹೋಲಿಸುವ ಮೂಲಕ ಭಾರಿ ವಿವಾದ ಸೃಷ್ಟಿಸಿದ್ದರು. ಸನಾತನ ಧರ್ಮವನ್ನು ವಿರೋಧಿಸುವುದು ಮಾತ್ರವಲ್ಲ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ‘ಸನಾತನ ನಿರ್ಮೂಲನಾ ಸಮಾವೇಶ’ದಲ್ಲಿ ಮಾತನಾಡಿದ್ದ ಅವರು, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರುದ್ಧವಾಗಿದೆ ಎಂದಿದ್ದರು.
“ಆದರೆ ನನ್ನ ಮಾತುಗಳನ್ನು ತಿರುಚಲಾಗಿದೆ. ತಮಿಳುನಾಡು ಮಾತ್ರವಲ್ಲದೆ, ಭಾರತದ ಉದ್ದಕ್ಕೂ ಅನೇಕ ನ್ಯಾಯಾಲಯಗಳಲ್ಲಿ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಕ್ಷಮೆ ಕೋರುವಂತೆ ಅವರು ನನ್ನ ಮೇಲೆ ಒತ್ತಡ ಹೇರಿದ್ದರು. ಆದರೆ ನಾನು ಹೇಳಿದ್ದಕ್ಕೆ ನಾನು ಬದ್ಧವಾಗಿದ್ದೇನೆ. ನಾನು ಕಲೈನಾರ್ನ ಮೊಮ್ಮಗ, ನಾನು ಎಂದಿಗೂ ಕ್ಷಮೆ ಕೋರುವುದಿಲ್ಲ” ಎಂದಿರುವ ಉದಯನಿಧಿ, ಎಲ್ಲ ಪ್ರಕರಣಗಳನ್ನೂ ತಾವು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.
- Empower yourself with the art of creating Chicken Fried Rice.
- ಹಿಂದಿ ಹೇರಿಕೆಗೆ ಕಿಡಿರಾಜ್ಯದಲ್ಲಿ ಹಿಂದಿ ಹೇರಿಕೆ ಪ್ರಯತ್ನ ನಡೆದಿದೆ ಎಂದು ಆರೋಪಿಸಿರುವ ಅವರು, ಈ ಪ್ರಯತ್ನಕ್ಕೆ ಇತ್ತೀಚೆಗೆ ನಡೆದ ತಮಿಳುನಾಡು ನಾಡಗೀತೆ ಬದಲಾವಣೆ ಪುರಾವೆ ಎಂದಿದ್ದಾರೆ. ದೂರದರ್ಶನ ತಮಿಳು ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ‘ದ್ರಾವಿಡ’ ಪದ ಕೈಬಿಟ್ಟು ನಾಡಗೀತೆ ಹಾಡಲಾಗಿತ್ತು ಎಂದು ಆರೋಪಿಸಿದ್ದಾರೆ.
“ಹೊಸದಾಗಿ ಮದುವೆಯಾದವರು ತಮ್ಮ ಮಗುವಿಗೆ ಸುಂದರವಾದ ತಮಿಳುನಾಡಿನ ಹೆಸರನ್ನೇ ಇರಿಸುವಂತೆ ಮನವಿ ಮಾಡುತ್ತೇನೆ. ಏಕೆಂದರೆ ಅನೇಕರು ತಮಿಳುನಾಡಿನ ಮೇಲೆ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಇದನ್ನು ನೇರವಾಗಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ‘ತಮಿಳ್ ತಾಯ್ ವಾಳ್ತು’ (ನಾಡಗೀತೆ) ಇಂದ ಕೆಲವು ಪದಗಳನ್ನು ಕೈಬಿಟ್ಟಿದ್ದಾರೆ. ಅವರು ಹೊಸ ಶಿಕ್ಷಣ ನೀತಿ ಮೂಲಕ ಹಿಂದಿ ಹೇರಲು ಪ್ರಯತ್ನಿಸುತ್ತಿದ್ದಾರೆ. ಅದರೆ ಅವರ ಪ್ರಯತ್ನ ವಿಫಲವಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.