2025ರಲ್ಲಿ ದೇಶಾದ್ಯಂತ ಜನಗಣತಿ, 2028ಕ್ಕೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ
2025 ರಿಂದ ಭಾರತದ ಜನಗಣತಿ:ದೇಶಾದ್ಯಂತ ಜಾತಿ ಗಣತಿ ನಡೆಸುವಂತೆ ಆಗ್ರಹಿಸಿ ವಿರೋಧ ಪಕ್ಷಗಳು ಸದ್ದು ಮಾಡುತ್ತಿವೆ. ಆದರೆ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ಜನಗಣತಿ ನಾಲ್ಕು ವರ್ಷ ಕಳೆದರೂ ಇನ್ನೂ ನಡೆದಿಲ್ಲ. 2011ರಲ್ಲಿ ನಡೆಯಬೇಕಿದ್ದ ಜನಗಣತಿ 2025ರಲ್ಲಿ ಆರಂಭವಾಗಲಿದೆ ಎಂದು ವರದಿ ತಿಳಿಸಿದೆ. ಜನ ಗಣತಿ ಮುಗಿದ ಬಳಿಕ ಲೋಕಸಭೆ ಸೀಟುಗಳ ಸೀಮಾ ನಿರ್ಣಯ ಕೂಡ ನಡೆಯಲಿದೆ.
- ದೇಶಾದ್ಯಂತ 2025ರಲ್ಲಿ ಆರಂಭವಾಗಿ 2026ರಲ್ಲಿ ಮುಕ್ತಾಯವಾಗಲಿದೆ ಜನಗಣತಿ ಪ್ರಕ್ರಿಯೆ
- 2011ರಲ್ಲಿ ನಡೆಯಬೇಕಿದ್ದ ಜನಗಣತಿ ಕೋವಿಡ್ ಸಾಂಕ್ರಾಮಿಕದ ಕಾರಣ ನಾಲ್ಕು ವರ್ಷ ವಿಳಂಬ
- ಜನಗಣತಿ ಮುಗಿದ ಬಳಿಕ 2028ರಲ್ಲಿ ಲೋಕಸಭೆ ಸೀಟುಗಳ ಸೀಮಾ ನಿರ್ಣಯ ಪ್ರಕ್ರಿಯೆ ಆರಂಭಹೊಸದಿಲ್ಲಿ: ಕೋವಿಡ್ 19 ಕಾರಣದಿಂದ ವಿಳಂಬವಾಗಿದ್ದ ಸಾರ್ವತ್ರಿಕ ಜನಗಣತಿಯನ್ನು ಮುಂದಿನ ವರ್ಷ ನಡೆಸಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ. ನಾಲ್ಕು ವರ್ಷದ ವಿಳಂಬದ ಬಳಿಕ, ದೇಶದ ಜನಸಂಖ್ಯೆಯನ್ನು ಲೆಕ್ಕ ಹಾಕುವ ಅಧಿಕೃತ ಸಮೀಕ್ಷೆಯು 2025ರಲ್ಲಿ ಆರಂಭವಾಗಲಿದೆ ಎಂದುಮೂಲಗಳು ಸೋಮವಾರ ತಿಳಿಸಿದೆ. ಈ ಪ್ರಕ್ರಿಯೆ 2025ರಲ್ಲಿ ಆರಂಭವಾಗಿ, 2026ರಲ್ಲಿ ಮುಕ್ತಾಯವಾಗುವ ನಿರೀಕ್ಷೆ ಇದೆ.
- Ganesh Chaturthi Songs 2024 : Devotional songs and here are the lyrics.
ಜನಗಣತಿ ಮುಗಿದ ಬಳಿಕ, ಅದರ ವರದಿ ಆಧಾರದಲ್ಲಿ ಲೋಕಸಭೆಯಲ್ಲಿನ ಕ್ಷೇತ್ರಗಳ ಸೀಮಾನಿರ್ಣಯ ಕಾರ್ಯ ಅರಂಭವಾಗಲಿದೆ. ಈ ಪ್ರಕ್ರಿಯೆ 2028ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದು ಸಾಧ್ಯವಾದರೆ 2029ರ ಲೋಕಸಭೆ ಚುನಾವಣೆ ವೇಳೆ ವಿವಿಧ ರಾಜ್ಯಗಳಲ್ಲಿನ ಲೋಕಸಭೆ ಸೀಟುಗಳ ಸಂಖ್ಯೆಯಲ್ಲಿ ಬದಲಾವಣೆಯಾಗಲಿದ್ದು, ಒಟ್ಟು ಸಂಸತ್ ಸ್ಥಾನಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ಜಾತಿ ಗಣತಿ ನಡೆಸುವಂತೆ ವಿವಿಧ ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವುದರ ನಡುವೆ ಈ ಬೆಳವಣಿಗೆ ನಡೆದಿದೆ. ಆದರೆ ಜನಗಣತಿ ಕುರಿತು ಕೇಂದ್ರ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ. ಜನಗಣತಿ ಪ್ರಕ್ರಿಯೆ ಕುರಿತಾದ ವಿವರಗಳನ್ನು ಈವರೆಗೂ ಬಹಿರಂಗಪಡಿಸಿಲ್ಲ.
ಮುಂದಿನ ವರ್ಷ ನಡೆಯಲಿರುವ ಜನಗಣತಿಯು ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳಗಿನ ಉಪ ಜಾತಿಗಳ ಸಮೀಕ್ಷೆಗಳನ್ನು ಸಹ ಒಳಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಈ ಮೊದಲು ಸಾಮಾನ್ಯವಾಗಿ ಧರ್ಮ ಮತ್ತು ಸಾಮಾಜಿಕ ವರ್ಗದ ವರ್ಗೀಕರಣದ ಜತೆಯಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವರ್ಗೀಕರಣ ನಡೆಯುತ್ತಿತ್ತು.
ಜನಗಣತಿ ಕುರಿತಾದ ವರದಿ ಬೆನ್ನಲ್ಲೇ ಜಾತಿ ಗಣತಿ ಬಗೆಗಿನ ಚರ್ಚೆ ಮತ್ತೆ ಶುರುವಾಗಿದೆ. ಜಾತಿ ಗಣತಿ ನಡೆಸಲು ಕೇಂದ್ರ ಸರ್ಕಾರ ನಿರಾಕರಿಸುತ್ತಿರುವುದು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳಿಗೆ ಎಸಗುತ್ತಿರುವ ದ್ರೋಹ ಎಂದು ಕಾಂಗ್ರೆಸ್ ನಾಯಕ ಮಾಣಿಕ್ಕಂ ಟ್ಯಾಗೋರ್ ವಾಗ್ದಾಳಿ ನಡೆಸಿದ್ದಾರೆ.
ಕೋವಿಡ್ ಕಾರಣದಿಂದ ಮುಂದೂಡಿಕೆ
ಜನಗಣತಿಯು ಸಾಮಾನ್ಯವಾಗಿ ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ನಡೆಯುತ್ತದೆ. 2011ರಲ್ಲಿ ದೇಶಾದ್ಯಂತ ಜಾತಿ ಗಣತಿ ನಡೆದಿತ್ತು. ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್ಪಿಆರ್) ಅಪ್ಡೇಟ್ ಮಾಡುವ ಈ ಪ್ರಕ್ರಿಯೆಯು 2021ರಲ್ಲಿ ನಿಗದಿಯಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ಕಾರಣದಿಂದ ಮುಂದೂಡಿಕೆಯಾಗಿತ್ತು. ನಂತರ ಗಣತಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿರಲಿಲ್ಲ. ಈ ಬದಲಾವಣೆಯಿಂದ ಇನ್ನು ಗಣತಿ ನಡೆಯುವ ನಿಗದಿತ ಸಮಯ ಕೂಡ ಬದಲಾಗುವ ಸಾಧ್ಯತೆ ಇದೆ.
ರಿಜಿಸ್ಟ್ರಾರ್ ಜನರಲ್ ಮತ್ತು ಭಾರತೀಯ ಜನಗಣತಿ ಆಯುಕ್ತರಾಗಿರುವ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರ ಕೇಂದ್ರೀಯ ನಿಯೋಜನೆಯನ್ನು ಇತ್ತೀಚೆಗಷ್ಟೇ 2026ರ ಆಗಸ್ಟ್ವರೆಗೂ ವಿಸ್ತರಿಸಲಾಗಿತ್ತು. ಇದು ಜನಗಣತಿ ಶೀಘ್ರವೇ ಆರಂಭವಾಗಲಿದೆ ಎಂಬ ಸುಳಿವು ನೀಡಿದೆ.
2011ರಲ್ಲಿ ನಡೆದಿದ್ದ ಕೊನೆಯ ಜನಗಣತಿ ಪ್ರಕಾರ ದೇಶದಲ್ಲಿ 121 ಕೋಟಿ ಜನಸಂಖ್ಯೆ ಇರುವುದಾಗಿ ವರದಿಯಾಗಿತ್ತು. ಆಗ ಅದು ಶೇ 17.7ರಷ್ಟು ಬೆಳವಣಿಗೆ ತೋರಿಸಿತ್ತು. ಆದರೆ ಈಗ ಅದು 144 ಕೋಟಿಯನ್ನೂ ಮೀರಿ ಚೀನಾವನ್ನು ಹಿಂದಿಕ್ಕಿದೆ.